
ಬೆಂಗಳೂರು: ಕರ್ನಾಟಕದ ಜನರ ಮತ ಪಡೆದು ಲೋಕಸಭೆಗೆ ಆಯ್ಕೆ ಆಗಿರುವುದನ್ನೇ ಮರೆತು ರಾಜ್ಯದಲ್ಲಿ ಬದುಕುವುದು ದುಸ್ತರ ಎಂದು ತುಚ್ಚವಾಗಿ ಹೇಳಿಕೆ ನೀಡುತ್ತಿರುವ ಸಂಸದ ಎಚ್.ಟಿ. ಸಾಂಗ್ಲಿಯಾನ ಅವರ ಧೋರಣೆಯನ್ನು ಸ್ವತಃ ಕ್ರೈಸ್ತರೇ ತೀವ್ರವಾಗಿ ಖಂಡಿಸಿದ್ದಾರೆ.
ಸಾಂಗ್ಲಿಯಾನ ತಮ್ಮ ಸಮುದಾಯಕ್ಕೆ ಸೇರಿದ್ದಾರೆ ಎಂಬ ಏಕೈಕ ಕಾರಣದಿಂದ ಕ್ರೈಸ್ತರು ಅವರ ಕೆಟ್ಟ ಚಾಳಿಯನ್ನು ಸಹಿಸಿಕೊಂಡು ತಮ್ಮದಲ್ಲದ ತಪ್ಪಿಗೆ ಕ್ಷಮೆ ಯಾಚಿಸಿದ್ದಾರೆ.
ಮತಾಂತರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಆರೋಪ ಹೊತ್ತಿರುವ ನ್ಯೂಲೈಫ್ನ ಮುಖ್ಯಸ್ಥ ಸ್ಯಾಮುಯೆಲ್ ಜತೆ ಸೇರಿ ‘ಮುಖ್ಯಮಂತ್ರಿಯಿಂದಾಗಿ ಕರ್ನಾಟಕದಲ್ಲಿ ವಾಸಿಸಲು ಸಾಧ್ಯವಾಗುತ್ತಿಲ್ಲ’ ಎಂಬ ಕನಿಷ್ಠ ಹೇಳಿಕೆ ನೀಡಿದ್ದರು. ಇದರಿಂದ ಕ್ರೈಸ್ತ ಸಮುದಾಯದ ಮುಖಂಡರು ಘಾಸಿಗೊಂಡಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಹೈಕೋರ್ಟ್ ನಿವೃತ್ತ ನ್ಯಾ|ಎಂ.ಎಫ್. ಸಲ್ಡಾನ ನೇತೃತ್ವದ ಕ್ರೈಸ್ತ ಮುಖಂಡರ ನಿಯೋಗ ಭೇಟಿಯಾಗಿ, ಸಾಂಗ್ಲಿಯಾನ ಮತ್ತು ಸ್ಯಾಮುಯೆಲ್ನಂತಹ ವ್ಯಕ್ತಿಗಳು ಈ ರೀತಿ ಹೇಳಿಕೆ ನೀಡಿರು ವುದು ಖಂಡನಾರ್ಹ ಎಂದು ವಿಷಾದ ವ್ಯಕ್ತಪಡಿಸಿತು.
ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಲ್ಡಾನ, ಇಂತಹ ಹೇಳಿಕೆಗಳನ್ನು ಒಪ್ಪಲು ಸಾಧ್ಯವಿಲ್ಲ. ಕ್ರೈಸ್ತ ಸಮುದಾಯದ ರಕ್ಷಣೆಗೆ ಸರ್ಕಾರ ಎಲ್ಲಾ ಕ್ರಮ ಕೈಗೊಳ್ಳುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರದ ವಿರುದ್ಧವೇ ಹೇಳಿಕೆಗಳನ್ನು ನೀಡಿರುವುದಕ್ಕೆ ಕ್ಷಮೆ ಯಾಚಿಸುತ್ತಿದ್ದೇವೆ ಎಂದು ನೊಂದು ನುಡಿದರು.
ಸಾಂಗ್ಲಿಯಾನ ಎದುರಲ್ಲೇ ರಾಷ್ಟ್ರಗೀತೆಗೆ ಅಗೌರವ
ಬೆಂಗಳೂರು: ಗುಂಪೊಂದು ರಾಷ್ಟ್ರಗೀತೆ ಹಾಡುವಾಗ ಎದ್ದು ನಿಲ್ಲದೆ ಅಗೌರವ ಸೂಚಿಸಿದ ಪ್ರಸಂಗ ನಗರದಲ್ಲಿ ಸೋಮವಾರ ಸಂಸದ ಎಚ್.ಟಿ.ಸಾಂಗ್ಲಿಯಾನ ಸಮ್ಮುಖದಲ್ಲೇ ನಡೆದಿದೆ.
ಅಂಬೇಡ್ಕರ್ ಭವನದಲ್ಲಿ ‘ಡ್ರಾವಿಡಿಯನ್ ವಾಯ್ಸ್’ ಸಂಘಟನೆ ಆಯೋಜಿಸಿದ್ದ ‘ಮತಾಂತರ ಏಕೆ?’ ಎಂಬ ಕಾರ್ಯಕ್ರಮದಲ್ಲಿ ಸಾಂಗ್ಲಿಯಾನ ಭಾಷಣ ಮುಗಿದ ತಕ್ಷಣ ರಾಷ್ಟ್ರಗೀತೆ ಹಾಡುವಂತೆ ಪ್ರಕಟಿಸಲಾಯಿತು.
ಸಾಂಗ್ಲಿಯಾನ ಸಹಿತ ಸಭಾಂಗಣದಲ್ಲಿದ್ದ ಬಹುತೇಕ ಮಂದಿ ಆಗ ಎದ್ದು ನಿಂತರೂ ಗುಂಪೊಂದು ಕುಳಿತೇ ಇತ್ತು. ಆದರೆ, ಸಾಂಗ್ಲಿಯಾನ ಅವರನ್ನು ಎದ್ದು ನಿಲ್ಲುವಂತೆ ಆ ಗುಂಪಿಗೆ ಹೇಳುವ ಗೋಜಿಗೂ ಹೋಗಲಿಲ್ಲ!
ನಾನೇನೂ ಉಗ್ರನಲ್ಲ: ಸಂಸದ ಸಾಂಗ್ಲಿಯಾನ
ಬೆಂಗಳೂರು: ‘ನಾನು ಏನು ತಪ್ಪು ಮಾಡಿದ್ದೇನೆಂದು ಹೇಳಲಿ. ದಾಖಲೆಗಳಿದ್ದರೆ ಬಹಿರಂಗಪಡಿಸಲಿ. ನನ್ನ ಚಲನವಲನ ಗಮನಿಸಲು ನಾನೇನೂ ಭಯೋತ್ಪಾದಕನಲ್ಲ’
ಇದು ನಗರದಲ್ಲಿ ಬೀಡಾಡಿ ದನಗಳನ್ನು ನಿಯಂತ್ರಿಸಿದ ಖ್ಯಾತಿಯ, ಮಾಜಿ ನಗರ ಪೋಲೀಸ್ ಆಯುಕ್ತ, ಹಾಲಿ ಸಂಸದ ಸಾಂಗ್ಲಿಯಾನ ಅವರ ಪ್ರತಿಕ್ರಿಯೆ.


